Friday 18 October 2013

 ಕಷ್ಟ ಸುಖಗಳಿಂದ ಯಾವ ವ್ಯಕ್ತಿಯೂ ಹೊರತಲ್ಲ. ಫ್ಲೇವರ್ ಸ್ವಲ್ಪ ಬೇರೆ  ಇರತ್ತೆ ಅಷ್ಟೆ. ಅದೇನೋ ಹೇಳ್ತಾರಲ್ಲಾ ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಅಂತಾ ಹಾಗೆ ನಮ್ಮಂತಾ ಮಿಡ್ಲ ಕ್ಲಾಸ್ ಜನಗಳಂತೂ ಪ್ರಾಬ್ಲೆಮ್ಸ್ ಅನ್ನೋ ಸಿಗ್ನಲ್ ಗೆ ಯಾವಾಗ್ಲೂ ರೀಚೆಬಲ್, ಕೈಕೊಡೋದು ಸುಖ ಸಂತೋಶದ  ನೆಟವರ್ಕ್ ಗಳೇ. ನಾನ್ ಹೈಸ್ಕೂಲ್ ಲ್ಲಿರೋವಾಗ ನಂಗೆ ಒಬ್ಳು ಫ್ರೆಂಡ್ ಇದ್ಲು... ಚೆಂದದ ಹುಡುಗಿ... ನಕ್ಕರೆ ಗಲ್ಲದ ಮೇಲೆ ಗುಳಿ ಬೀಳ್ತಿತ್ತು ಅವ್ಳಿಗೆ. ಹೆಸರು ನಿಧಿ. ಅವಳು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಬುದ್ಧಿವಂತೆ. ಅಂದ್ರೆ ಚೆನ್ನಾಗ್ ಓದ್ತಿದ್ಲು. ನಾವು ಹೈಸ್ಕೂಲ್ ಫ್ರೆಂಡ್ಸ್ ಅಂತ್ಹೇಳಿದ್ನಲ್ವಾ. ಆ ಏಜೇ ವಿಚಿತ್ರ. ಕಂಡಿದ್ದಕ್ಕೆಲ್ಲಾ ಆಕಾಶ ಭೂಮಿ ಒಂದಾಗೋ ಥರ ನಗ್ತಿದ್ವಿ.  ಪೆದ್ದರ ಥರ ಎಲ್ಲಾದಕ್ಕೂ ಖುಶಿಪಡ್ತಿದ್ವಿ... ಹೀಗೇ ಆ ಮೂರು ವರ್ಷ ಕಳೆದುಹೋಯಿತು. ನಾವೆಲ್ಲಾ ಬೇರೆ ಬೇರೆ ಕಾಲೇಜ್ ಸೇರ್ಕೊಂಡ್ವಿ. ಸ್ವಲ್ಪ ದಿನ ಹಳೇ ಫ್ರೆಂಡ್ಸ್ ನ ಬಿಟ್ಟಿರೋಕೆ ಕಷ್ಟ ಆಗಿ ದಿನಾ ಫೋನ್ ಮಾಡ್ತಿದ್ವಿ. ಆಮೇಲಾಮೇಲೆ ಅವೆಲ್ಲಾ ನಿಂತೋಯ್ತು. ಹಾಗೇ ನಿಧಿ ಕೂಡ ಕಣ್ಮರೆಯಾದಳು. ನನಗೆ ನಿಧಿ ಅಂತಾ ಒಬ್ಬಳು ಸ್ನೇಹಿತೆ ಇದ್ದಳು ಅಂತಷ್ಚೇ ಚೆಂದದ ನೆನಪಾಗಿ ಉಳಿದಿತ್ತು.
ವರ್ಷಗಳೇ ಕಳೆದ್ಹೋದ್ವು. ಈ ಫ್ರೆಂಡ್ ಶಿಪ್ ಅನ್ನೋದೇ ಹಾಗೆ. ಎಷ್ಟೇ ವರ್ಷ ಆಗಿದ್ರೂ  ಚಿನ್ನದ ತರ ಅದರ ವಾಲ್ಯೂ ಅದಿಕ್ಕಿದ್ದೇಯಿರತ್ತೆ. ನಂದೂ ಡಿಗ್ರಿ  ಮುಗೀತು. ಕೆಲಸಾ ಅಂತಾ ಸೇರೀನೂ ಒಂದೆರೆಡು ವರ್ಷ ಸರ್ರಂತಾ ಕಳೆದ್  ಹೋಗ್ಬಿಡ್ತು. ಫ್ರೆಂಡ್ಸ್ ಯಾವಾಗ್ಲೂ ನೆನಪಾಗೋರು. ಮೀಟ್ ಆಗೋಣ ಅನ್ನಿಸೋದು. ಬಟ್ ಆಗ್ಲೇಯಿಲ್ಲ. ನಾನು ಹೊಟ್ಟೆಪಾಡಿಗೆ ಕಲಿತಿದ್ದನ್ನ ಒರೆಗೆ ಹಚ್ಚತಾಯಿದ್ದೀನಿ ಅಂದ್ರೆ ನನ್ನ ಸ್ನೇಹಿತರು ಕೂಡ ಅದನ್ನೇ ಮಾಡ್ತಿರಬಹುದು ಅಂದ್ಕೊಂಡಿದ್ದೆ. ಅಫ್ಕೋರ್ಸ್ ಕೆಲವ್ರು ಮಾಡ್ತಿದ್ದಾರೆ ಕೂಡ. ಆದ್ರೆ ನಾನ್ ಹೇಳಿದ ನನ್ನ ಸ್ನೇಹಿತೆ ನಿಧಿ ಒಂದೊಮ್ಮೆ ನಂಗೆ ಸಡನ್ ಆಗಿ ಕಾಲ್ ಮಾಡಿದ್ಲು. ನಾನು ಫುಲ್ ಜೋಶ್ ಲ್ಲಿದ್ದೆ. ಆಹಾ!! ಓಹೋ!! ಅಂತಾ ಮಾತಾಡ್ತಿದ್ದೆ. ಕೆಲವ್ ಸಲ ಜೋಶಲ್ಲಿ ಓವರ್ ಆಗೂ ಮಾತಾಡ್ಬಿಡ್ತೀನಿ.  ನಂದೇ ನಾನ್ ಏನೋ ದೊಡ್ಡು ಲೈಫ್ ಎಚೀವ್ಮೆಂಟ್ ಮಾಡ್ಬಿಟ್ಟಿದ್ದೀನೇನೋ ಅನ್ನೋ ಲೆವೆಲ್ಗೆ ಅವಳ ಹತ್ರ ಮಾತಾಡೋ ಭರದಲ್ಲಿ ಅವಳ ಬಗ್ಗೆ ಹೆಚ್ಚಿಗೆ ಏನೂ ತಿಳ್ಕೋಳ್ಳೋಕಾಗಿಲ್ಲ. ಯಾಕೇಂದ್ರೆ ಅವಳು ಜಾಸ್ತಿ ಮಾತಾಡ್ತಿರಲಿಲ್ಲ. ಆದ್ರೆ ಒಂದಂತೂ ನೋಟೀಸ್ ಮಾಡ್ದೆ. ಅಲ್ಲಿ ಆ ಹಳೆಯ ನಗುಯಿರಲಿಲ್ಲ. ಅಂದ್ಮೇಲೆ ಗಲ್ಲದ ಮೇಲೆ ಗುಳಿ ಬಿದ್ದಿರೋಕೂ ಛಾನ್ಸ್ ಇಲ್ಲ ಬಿಡಿ. ಮಾತಿನಲ್ಲಿ ನಿರಾಳತೆಯಿರಲಿಲ್ಲ. ಶಬ್ದಗಳು ಭಾರವಾಗಿ ಹೊರಗೆ ಬರ್ತಾಯಿತ್ತು. ಏನಪ್ಪಾ ನಾನು ವಯಸ್ಸಿಗ್ ಸರಿಯಾಗ್ ವರ್ತಿಸ್ತಾಯಿಲ್ವಾ ಅಥವಾ ನಿಧಿ ವಯಸ್ಸಿಗೆ ಮೀರಿ ಗಂಭೀರವಾಗಿದ್ದಾಳಾನಿಜವಾಗ್ಲೂ ಈ ಪ್ರಶ್ನೆ ಆವತ್ತು ಮನಸ್ಸಿನಲ್ಲಿ ಮೂಡಿತ್ತು.ಯಾಕೇಂದ್ರೆ, ನಮ್ಮ ನಗು,ತುಂಟತನ, ಕಾಡುಹರಟೆಗೆ ಜೊತೆಯಾಗ್ತಿದ್ದ ನಿಧಿ ಸಡನ್ನಾಗಿ ಇಷ್ಟೊಂದು ಬದಲಾಗೋದಕ್ಕೆ ಏನಪ್ಪಾ ಕಾರಣಾ? ಪ್ರಶ್ನೆ ಏಳ್ತಿದ್ದಹಾಗೆ ಮತ್ತೆ ಕಾಲ್ ಮಾಡ್ದೆ ಅವಳಿಗೆ.
‘’ಮದುವೆ ಆಯಿತು ಅಂದೆ ನಿಧಿ  ಆರಾಮಾಗಿದಿಯಾ ತಾನೇ?’’  ಕೇಳೇಬಿಟ್ಟೇ ಡೌಟ್ ಬಂದ್ರೆ ಸ್ಟ್ರೈಟ್ ಆಗ್ ಕೇಳ್ಬಿಡ್ಬೇಕು. ಅದ್ರಲ್ಲೂ ಸ್ನೇಹದಲ್ಲೆಂತಾ ಫಾರ್ಮಾಲಿಟೀಸ್.  ಆ ಕಡೆಯಿಂದ ಸ್ವಲ್ಪ ಹೊತ್ತು ವಾಯ್ಸ್ ಬರ್ಲಿಲ್ಲ. ನಾನು ‘’ನಿಧಿ..ನಿಧಿ..ಏನಾಯ್ತೇ...?’’ ಅಂತಾ ನಿಧಾನವಾಗಿ ಕೇಳ್ದೇ.  ಅವಳು ಅಳೋದಕ್ಕೆ ಸ್ಟಾರ್ಟ್ ಮಾಡಿದ್ಲು.  ನಂಗೆ ಅದು ಸ್ವಲ್ಪ ಹಿಡಿಸದೇಯಿರುವಂತದ್ದು. ಹೆಣ್ಣುಮಕ್ಕಳು ಅತ್ತುಬಿಟ್ಟರೇ.  ಜನ ಅಳ್ಸ್ತಾನೇಯಿರ್ತಾರೆ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ.  ‘’ನಿಧಿ ಸ್ವಲ್ಪ ಧೈರ್ಯ ತೊಗೊಂಡು ಹೇಳು ಏನಾಯ್ತು’’ ಅಂತಾ ಮತ್ತೆ ಕೇಳ್ದೆ. ಅವ್ಳು ಮೊದಲಿನಷ್ತು  ಕಂಫರ್ಟೆಬಲ್ ಇದ್ದಂತೆ ತೋರ್ಲಿಲ್ಲ. ಅದು ಸಹಜ ಕೂಡ. ನಮ್ಮ ನಡುವಿನ ಕಾಂಟಾಕ್ಟ್ ಇಲ್ಲದೇ 8 ವರ್ಷಕ್ಕೂ ಹೆಚ್ಚು ಕಳೆದು ಹೋಗಿತ್ತು. ಈಗ ಇದ್ದಕ್ಕಿದ್ದಹಾಗೆ ಬಂದು ಎಲ್ಲವನ್ನೂ ಹೇಳು ,ಅಂದ್ರೆ ಅವತ್ತವಳಿಗೆ ಹಿಂಸೆ ಆಗಿತ್ತು. ಹೋಗ್ಲಿ ಬಿಡು ನಿಧಿ ಇಷ್ಟಯಿಲ್ಲಾಂದ್ರೆ ಹೇಳ್ಬೇಡ ಅಂತಾ ಅವಳನ್ನರ್ಥ ಮಾಡ್ಕೊಂಡು ಫೋನಿಟ್ಟಿದ್ದೆ.
ನಿಧಿ ಏನೋ ಮುಚ್ಚಿಡ್ತಾಯಿದ್ದಾಳೆ ಅಂತಾ ಗೊತ್ತಾದ್ರೂ ನಾನು ಕೆದುಕೋಕೆ ಹೋಗಿರ್ಲಿಲ್ಲ. ನಾನು ನನ್ನದೇ ಕೆಲಸಗಳಲ್ಲಿ ಬ್ಯುಸಿ ಆಗ್ಬಿಟ್ಟೆ. ಇನ್ನಫ್ಯಾಕ್ಟ್ ನಿಧಿ ವಿಚಾರ ಮನಸ್ಸಿನ ಮೂಲೆಗೆ   ಸರಿದುಬಿಟ್ಟಿತ್ತು. ಫೇಸ್ಬುಕ್ ಲ್ಲಿ ನಿಧಿ ಮನೆಯ ಹತ್ತಿರವೇ ಇದ್ದ ನನ್ನ ಹಳೇ ಕ್ಲಾಸ್ಮೇಟ್ ಒಬ್ಬ ಆನ್ ಲೈನ್ ಸಿಕ್ಕಿದ್ದ. ಮಾತಾಡ್ತಾ ಮಾತಾಡ್ತಾ ನಿಧಿ ವಿಚಾರಾನೂ ಪ್ರಸ್ತಾಪ  ಆಯ್ತು. ಆಗ ಅವ್ನು ‘’ಅವಳದ್ದೆಂತ ಟ್ರಾಜಿಡಿ ಮಾರಾಯ್ತಿ, ಛೇ!! ’’ ಅಂತಾ ಶುರುಮಾಡ್ದವ್ನು, ಅವಳು ಮದುವೆಯಾಗಿ ವರ್ಷದ ಒಳಗೆ ಗಂಡನನ್ನ ಕಳೆದುಕೊಂಡಿದ್ದು, ಆಗ ನಿಧಿ ನಾಲ್ಕು ತಿಂಗಳ ಗರ್ಭಿಣಿ ಇದ್ದಧ್ಧು,  ಹೀಗೆ ಎಲ್ಲಾ ಹೇಳ್ತಾ ಹೋದ. ನನಗೆ ಅಳಬೇಕೋ,ಚೀರಬೇಕೋ, ಏನು ಮಾಡ್ಬೇಕು ಅಂತಾನೇ ತೋಚಿಲ್ಲಾ. ನಿಧಿನಾ ಗಟ್ಟಿ ಹಿಡ್ಕೊಂಡ್ ಬಿಡ್ಬೇಕು ಅನ್ನಿಸ್ಬಿಟ್ಟಿತ್ತು.  ರಾತ್ರಿ 9 ದಾಟಿತ್ತು, ಫೋನ್ ಮಾಡ್ಬಾರ್ದಿದ್ ಟೈಮ್ ಏನ್ ಆಗಿರ್ಲಿಲ್ಲ. ಕಣ್ಣಂಚಲ್ಲಿ ನೀರಿತ್ತು, ಮನಸ್ಸಿನಲ್ಲಿ ದುಖಯಿತ್ತು,  ಬೇಸರಯಿತ್ತು, ನಿಧಿಯನ್ನ ಕೇಳಬೇಕು ಅನ್ನಿಸ್ತಿದ್ದ ಸಾವಿರ ಪ್ರಶ್ನೆಗಳಿದ್ವು.  ಮೊಬೈಲ್ ತಗೊಂಡು ನಂಬರ್ ಒತ್ತೋದಕ್ಕೆ ಹೊರಟವಳಿಗೆ ಕಾಲ್ ಮಾಡ್ಲಾ ,ಬೇಡಾವಾ ಅನ್ನೋ ಕನ್ಫ್ಯೂಶನ್. ಕೊನೆಗೂ ಬೇಡ ಅಂತಾ ಡಿಸೈಡ್ ಮಾಡಿ ಆ ರಾತ್ರಿ ಸುಮ್ಮನಾಗಿದ್ದೆ. ಬೆಳಿಗ್ಗೆ ಎದ್ದಾಗಲೂ ಮನಸ್ಸು ಭಾರ. ತಡೀಲಿಲ್ಲ .ಕಾಲ್ ಮಾಡೇಬಿಟ್ಟೆ ‘’ನಿಧಿ ಹೇಗಿದ್ದೀಯಾ?’’ ಕೇಳಿದೆ. ಅವಳು ಶೀತು ಲಾಸ್ಟ್ ಟೈಮ್ ನಿನ್ಹತ್ರ ಜಾಸ್ತಿ ಮಾತಾಡೋಕಾಗಿಲ್ಲ, ಅಂತಾ  ಮಾತು ಶುರು ಮಾಡಿದವಳು ಒಂದುವರೆ ಘಂಟೆ ಮಾತಾಡಿದ್ಲು. ನನಗೆ ಫೋನಿಟ್ಟಾಗ ತಲೆ ಸುತ್ತೋ ಅನುಭವ. ಆಗ ನಿಧಿಗಿನ್ನು 25ರ ವಯಸ್ಸು. 70ಕ್ಕಾಗುವಷ್ಟು ಅನುಭವಿಸಿದ್ದಾಳಲ್ಲ ಅನ್ನಿಸಿಬಿಟ್ಟಿತ್ತು.
ನಿಧಿ sslcಯಲ್ಲಿ ಶೇ 85 ತೊಗೊಂಡು ಪಾಸಾಗಿದ್ದಳು. ಸಹಜವಾಗೇ ಕನಸುಗಳಿದ್ದ ಹುಡುಗಿಯಾಗಿದ್ದರಿಂದ ಸೈನ್ಸ್ ತೊಗೊಂಡ್ಲು. ಆದರೆ ನಿಧಿ ಮನೆಯವರು ಅಷ್ಟೊಂದು ಅನುಕೂಲಸ್ಥರಲ್ಲದ ಕಾರಣ ಸೆಕೆಂಡ್ ಪಿಯುಸಿ ಮುಗೀತಾಯಿದ್ದ ಹಾಗೆ ಬೆಂಗಳೂರಿನ ಕಡೆ ಒಳ್ಳೆ ಸಂಬಂಧ ಬಂದಿದೆ ಅಂತ  ಮದುವೆ ಮಾಡಿ ಕೈತೊಳ್ಕೊಂಡ್ಬಿಟ್ಟಿದಾರೆ. ನಾನು ನಿಧಿ ಮನೆಗೆ ಒಮ್ಮೆ ಹೋದಾಗ ಮದುವೆ ಫೋಟೋ ತೋರಿಸಿದ್ದಳು. ಘಡೂತಿ ದೇಹದ ವ್ಯಕ್ತಿಯ ಪಕ್ಕ ನಮ್ಮ ಪುಟಾಣಿ ಗುಬ್ಬಚ್ಚಿ ಮರಿ ನಿಧಿ. ವಿವಾಹದ ದೃಶ್ಯ, ವಯಸ್ಸಿನ ಅಂತರ, ಎಲ್ಲವೂ ಕಣ್ಮುಂದೆ ಬಂತು ಬಿಡಿ. ಆದರೆ ಮದುವೆ ಮುಗಿದು ಒಂದು ವರ್ಷದ ಒಳಗಾಗಿಯೇ ,ನಿಧಿ 4 ತಿಂಗಳ ಗರ್ಭಿಣಿ ಇರೋವಾಗಲೇ ,ಆರೋಗ್ಯದ ಸಮಸ್ಯೆಯಿಂದ ಗಂಡನನ್ನ ಕಳ್ಕೊಂಡಿದ್ಲು. ‘’ಹೋಗ್ಲಿ ಆ ಒಂದು ವರ್ಷಾನಾದ್ರೂ ಸಂತೋಷದಿಂದ ಇದ್ಯಾ ನಿಧಿ? ‘’ಅಂದ್ರೆ ,ಒಂದು ನಗು ಬಿಸ್ಹಾಕಿದ್ಲು ನೋಡಿ, ಎಲ್ಲಾ ಅರ್ಥಾ ಆಗೋಗಿತ್ತು.  ಅದಾದ ಮೇಲೆ ದಿನ ದಿನವೂ ನರಕ ಅನುಭವಿಸ್ತಾಯಿದ್ದೀನಿ. ಗಂಡನ ತಮ್ಮಂದಿರೇ ನನ್ನನ್ನ ಕೆಟ್ಟದಾಗಿ ಕಂಡರು. ಗಂಡನ ಮನೆಯಿಂದ ಕಿಂಚಿತ್ತೂ ಸಹಾಯ ಸಿಕ್ಕಿಲ್ಲ  ಶೀತು ಅಂತಾ ಬಿಕ್ಕಿ ಬಿಕ್ಕಿ ಅತ್ತಳು. ಈಗ ಹೇಗೊ ಚಿಕ್ಕದೊಂದು ಕೆಲಸ ಹುಡುಕ್ಕೊಂಡಿದ್ದೀನಿ. ಅಣ್ಣನ ಸಹಾಯವಿದೆ, ಅಮ್ಮನ ಆಸರೆಯಿದೆ ಅಂತಾ ಅವಳೇ ಅವಳಿಗಿರೋ ಮಾರ್ಗೋಪಾಯಗಳನ್ನ ನಾನ್ ಮಾತಾಡೋ ಮೊದಲೇ ಮಾತಾಡಿ ಮುಗಿಸಿದ್ಲು.
ಅವಳು ಎಷ್ಟು ಸುಲಭವಾಗಿ ‘’ನಾನು ಬದುಕ್ತೀನಿ ಶೀತಲ್,ಡಿಗ್ರಿ ಕಟ್ಟಿದ್ದೀನಿ, ಏನಾದ್ರೂ ಮಾಡ್ತೀನಿ, ನನ್ನ ಮಗನೇ ಈಗ ನನಗೆಲ್ಲ. ಅವನ ತುಂಟಾಟಗಳೇ ನನಗೆ ಜೀವನದ ಖುಷಿ’’  ಅಂತೆಲ್ಲಾ ಹೇಳ್ದಾಗ, ನನಿಗೆ ಗೊತ್ತಿತ್ತು. ಆವಳ ಪರಿಸ್ಥಿತಿಯಲ್ಲಿ  ಅವಳು ಆಡ್ತಾಯಿರೋ ಮಾತಿನಷ್ಟು ಸುಲಭ ಅವಳ ಜೀವನ ಆಗಿರಲಿಲ್ಲ. ಬಟ್ ಅವಳೊಳಗೊಂದು ಕಿಚ್ಚಿತ್ತು, ಹಠವಿತ್ತು, ಹುಂಬತನವಿತ್ತು  ಧೈರ್ಯವಿತ್ತು. ಅದನ್ನ ಕದಡಿಸೋಕೆ ನನಗಿಷ್ಟ ಆಗಿಲ್ಲ. ಸೈಲೆಂಟ್ ಆಗ್ಬಿಟ್ಟೆ. ಯಾರ್ಯಾರೊ ಯಾರ್ಯಾರಿಗೋ ಏನೇನಕ್ಕೋ ಹೋರಾಟಗಾರರ ಪಟ್ಟ ಕಟ್ತಾರೆ. ಆದ್ರೆ ನನ್ನ ಪ್ರಕಾರ ನಿಧಿಯೂ ಒಬ್ಬ ಹೋರಾಟಗಾರ್ತಿಯೇ.


6 comments:

  1. ಗಂಡನನ್ನು ಕಸಿದುಕೊಂಡ ವಿಧಿಯು., ಚಂದದ ಮಗುವಿನ ದೊಡ್ಡ ನಿಧಿ ಕೊಟ್ಟಿದೆ . . ಆ ನಿಧಿಯೊಂದಿಗೆ ನಿಮ್ಮ ಸ್ನೇಹಿತೆ ನಿಧಿಯ ಮುಂದಿನ ಜೀವನದ ನದಿಯು ಸರಾಗವಾಗಿ ಹರಿಯಲಿ ಎಂದು ಹಾರೈಸುತ್ತೇನೆ . . All the best Nidhi . . cheer up . .

    ReplyDelete
  2. ಪ್ರತಿಯೊಬ್ಬರ ಜೀವನದಲೂ ಕಷ್ಟ ಇದ್ದೇ ಇರುತ್ತೆ, ಆದರೆ ಆ ಕಷ್ಟನ ಎದುರಿಸೋ ಧೈರ್ಯ ಎಲ್ಲರಿಗೂ ಇರಲ್ಲ.
    ಆ ಧೈರ್ಯ ನಿಮ್ಮ ಗೆಳತಿ ನಿಧಿಯೊಂದಿಗೆ ಇರಲಿ. ನೆಮ್ಮದಿಯ ಜೀವನ ಆಕೆಗೆ ಸಿಗಲಿ ಎಂದು ಹಾರೈಸುತ್ತೇನೆ....


    ReplyDelete
  3. ಕಷ್ಟ ಅನ್ನೋದು ಕನಸಿನ ಹಾಗೆ....ಒಳ್ಳೇದು ಬಂದಾಗ ಅನುಭವಿಸಬೇಕು...ಕೆಟ್ಟದಿದ್ದಾಗ ಥಟ್ ಅಂತಾ ಕಣ್ಣು ತೆರೆದು ಬಿಡಬೇಕು..ಅಲ್ಲಿಗೆ ಆ ತೆರೆದು ಕಣ್ಣುಗಳು ಭವಿಷ್ಯವನ್ನು ನೋಡೋ ತಾಕತ್ತಿಗೆ ಕಣ್ಣೀರಿನ ಆಣೆಕಟ್ಟನ್ನು ಕಟ್ಟಿ ಸಲುಹೋದು...ಮಾತಿಗಿಂತಲೂ ಜೀವನ ಸುಲಭ....ಯಾಕೆಂದ್ರೆ ಮಾತು ಕೆಲೋರನ್ನು ಕಳೆದುಕೊಳ್ಳುವಂತೆ ಮಾಡುತ್ತೆ..ಆದ್ರೆ ಬದುಕು ಎಲ್ಲವನ್ನೂ ಕಳೆದುಕೊಂಡ ಮೇಲೆಯೇ ಶುರುವಾಗೋದು..ಹಾಗೆ....

    ReplyDelete
  4. ನೋವುಗಳನ್ನ ದಾಖಲಿಸೋಕೂ ನೋವನ್ನು ಉಂಡ ಮನಸ್ಸು ಬೇಕು. ಇಲ್ಲಿ ಅದು ಸಾರ್ಥಕ ಆಗಿದೆ. Plz wisit www.jodhihassan.blogspot.com

    ReplyDelete
  5. ಜೀವನದ ಧಾವಂತದ ಬದುಕಿನಲ್ಲಿ "ನಿಧಿ"ಯ ತರಹದ ಸಾಕಷ್ಟು ಹುಡುಗಿಯರು ನಮ್ಮ ನಡುವೆ ಇದ್ದಾರೆ...! ಆದರೆ ಅಂತಹ ನೋವುಗಳಿಂದ ಹೊರಬರಲು ಸೋ ಕಾಲ್ಡ್ ಸಿವಿಲೈಜ್ಡ್ ಪೀಪಲ್ಸ್ ಆದ ನಾವುಗಳು ಇಂತಹ ಸ್ನೇಹಿತೆಯರಿಗೆ ಒಂದು ಒಳ್ಳೆಯ ವಾತಾವರಣ ಸೃಷ್ಟಿ ಮಾಡೋ ಅವಶ್ಯಕತೆ ಇದೆ... ಶೀತಲ್. ಏನ್ ಅಂತೀರಾ...?

    ReplyDelete